ಮುಕ್ತಿ ಅನ್ನುವ ಪರಮಪದ

ನೋಡುವ ಬೆಡಗು । ದೀಪಾ ಫಡ್ಕೆ

`ಜೋ ಭಜೆ ಹರಿ ಕೋ ಸದಾ, ಸೋ ಹಿ ಪರಮಪದ ಪಾವೇಗಾ, ಸೋ ಹಿ ಪರಮಪದ ಪಾವೇಗಾ’ ಭೈರವಿರಾಗದಲ್ಲಿ ಸ್ವರಮಾಂತ್ರಿಕ ಭೀಮಸೇನರು ಪರವಶರಾಗಿ ಸಂಕೀರ್ತನ ಮಾಡುತ್ತಿದ್ದರೆ ತುಂಬಿದ ಸಭಾಂಗಣದಲ್ಲಿ ಶ್ರೋತ್ರುಗಳ ಮನವೂ ಆದ್ರ್ರವಾಗುತ್ತಿತ್ತು. ಆ ಕ್ಷಣದಲ್ಲಿ ಅನೇಕರಿಗೆ ಅದುವೇ ಪರಮಪದ. ಸ್ವಯಂಸಾಧನೆಯಿಂದ ಸಿದ್ಧಿಯ ಶಿಖರವೇರಿದ ಭೀಮಸೇನರು ಹಾಡುತ್ತಾ ಹಾಡುತ್ತಾ ಮುಕ್ತರಾಗುತ್ತಿದ್ದರೆ, ಕೇಳುತ್ತಿದ್ದ ಕಿವಿಗಳು ಆ ಸಿದ್ಧಿಯ ರಸದಲ್ಲಿ ಮುಳುಗೇಳುತ್ತಾ ಮುಕ್ತರಾಗುತ್ತಿದ್ದರು. ಇದೇ ಅಥವಾ ಇಷ್ಟೇ ಮುಕ್ತಿ ಅನ್ನುವ ಪರಮಪದದ ಸರಳ ವ್ಯಾಖ್ಯಾನ. ಮೋಕ್ಷ, ಕೈವಲ್ಯ, ಲಿಂಗೈಕ್ಯ, ವೈಕುಂಠ ಪ್ರಾಪ್ತಿ, ಅರ್ಹತ್, ನಿರ್ವಾಣ ಹೀಗೆ ಹತ್ತಾರು ಹೆಸರುಗಳಿಂದ ಸಮ್ಮೋಹನಗೊಳಿಸುವ ಮುಕ್ತಿಯೆಂದರೆ ಕ್ಷಣದ ಸತ್ಯದಿಂದ, ಕ್ಷಣಭಂಗುರತೆಯಿಂದ ಬಿಡುಗಡೆಯಾಗುವುದು, ಜೇಡ ಕಟ್ಟಿದ ಬಲೆಯಂತೆ ತನ್ನದೇ ಆಸೆಗಳ ಬಂಧಗಳಿಂದ ಕಳಚಿಕೊಳ್ಳುವುದು.

ಈ ಭೂಮಿಯಲ್ಲಿ ಮನುಷ್ಯನಿಗಷ್ಟೇ ಅವಕಾಶವಿರುವುದು ಮುಕ್ತವಾಗಲು, ಏಕೆಂದರೆ ಯೋಚನೆಗಳ ಆಗರ ಅವನು. ಯೋಚನೆಗಳು ಮೂಡಿದಲ್ಲೇ ಬಂಧಗಳು ಹುಟ್ಟಿಕೊಳ್ಳುವುದು. ಬಂಧ ಮೂಡಿದ ಮೇಲೆಯೇ ಮುಕ್ತಿಗೆ ಹಾತೊರೆಯುವುದು. ಆಸೆ ಮನುಷ್ಯನನ್ನು ಬದುಕಲು ಪ್ರೇರೇಪಿಸಿದರೆ, ಸುಖ ಮನುಷ್ಯನನ್ನು ಕಳಕೊಳ್ಳುವ ಭ್ರಾಂತಿಗೆ ತಳ್ಳುತ್ತದೆ. ಇದರಿಂದ ಪಾರಾಗಿ, ಬಿಡುಗಡೆಯಾಗಿ ಹೊಂದುವ ನಿರಾಳತೆಯೇ ಮುಕ್ತಿ. ಆದರೆ ಸಾಮಾನ್ಯವಾಗಿ ವೈಯಕ್ತಿಕ ಸುಖವೇ ಹಿರಿದಾಗಿ ಕಂಡುಬರುವುದರಿಂದ ನಿರಾಳತೆ ಸಿಗದೇ ಹೋಗುತ್ತದೆ. ಒಂದು ಬಂಧದಿಂದ ಇನ್ನೊಂದಕ್ಕೆ ಸಿಲುಕುತ್ತಾ ಇರುವುದೇ ಸುಖವಾಗುತ್ತದೆ. ಇದನ್ನು ಕ್ಷಣದ ಮುಕ್ತಿಯೆನ್ನಲಡ್ಡಿಯಿಲ್ಲ. ಪ್ರತಿಯೊಬ್ಬರ ಮನದಲ್ಲಿ ಪಡೆಯುವ, ಹೊಂದುವ ಬಯಕೆಯಿರುತ್ತದೆ. ಅದು ಸಿಕ್ಕಿದೊಡನೆ ಮನಸ್ಸು ಮುಕ್ತವಾದಂತೆ ಅನಿಸುತ್ತದೆ ಅಥವಾ ಸುಖದ ಕ್ಷಣದಲ್ಲಿ ಅದೇ ಮುಕ್ತಿಯಂತೆ ಭಾಸವಾಗುತ್ತದೆ. ಆದರೆ ಅದು ಕ್ಷಣಿಕಕ್ಕೆ ದಕ್ಕಿದ ಮುಕ್ತಿ. ಏಕೆಂದರೆ ಸ್ವಲ್ಪ ಹೊತ್ತಿನಲ್ಲೇ ಮನಸ್ಸು ಮತ್ತೇನಕ್ಕೋ ಭೋರ್ಗರೆಯಲಾರಂಬಿಸುತ್ತದೆ. ಹೀಗೆ, ಇಂತಹ ಸಣ್ಣಪುಟ್ಟ ಮುಕ್ತಿಗಳಿಂದ ಹಿಡಿದು ಜಗಕೆ ಬೆಳಕು ನೀಡಿದ ಸಂತರು, ದಾರ್ಶನಿಕರು, ಅವರವರ ಶಕ್ತಿಗೆ, ಭಾವಕ್ಕೆ ತಕ್ಕಂತೆ ಸಾಧಿಸಿದ ಮುಕ್ತಿಯನ್ನೂ ಜಗತ್ತು ಕಂಡಿದೆ. ಅತ್ಯಂತ ಸರಳವಾಗಿ ಮುಕ್ತಿಯ ಪರಿಭಾಷ್ಯ ಹೇಳಿದವರು ಸರಳ ಬದುಕಿನ ಪಾಠ ಹೇಳಿದ ಡಿ.ವಿ.ಜಿ.ಯವರು. ತಮ್ಮ `ಮಂಕುತಿಮ್ಮನ ಕಗ್ಗ’ದಲ್ಲಿ ಮುಕ್ತಿಯೆನ್ನುವುದು ನಿತ್ಯಬದುಕನ್ನು ಬಾಳುವ ರೀತಿಯಲ್ಲಿದೆ ಎಂದಿದ್ದಾರೆ.
                            ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ
                            ಯುಕ್ತದಿಂದೆರಡು ಮಂಚುಗಳೊಂದೆ ಪಥಕೆ
                            ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ
                            ಶಕ್ತಿಯುಧ್ಯಾತ್ಮಕದು-ಮಂಕುತಿಮ್ಮ

ಭುಕ್ತಿಪಥ-ಹೊಟ್ಟೆಪಾಡಿನ ಜೀವನ. ಇದೂ ಮುಕ್ತಿಪಥವೆ. ಇವೆರಡೂ ದಾರಿಯ ಎರಡು ಬದಿಗಳಷ್ಟೇ. ಬದುಕು ಒದಗಿಸಿದ ಕೆಲಸಗಳನ್ನು ನಿರ್ವಂಚನೆಯಿಂದ ಮಾಡಿದಾಗ ಅಧ್ಯಾತ್ಮಶಕ್ತಿ ದ್ವಿಗುಣವಾಗುತ್ತದೆ ಎನ್ನುತ್ತಾರೆ ಡಿ.ವಿ.ಜಿ. ಅಧ್ಯಾತ್ಮಶಕ್ತಿಯೆಂದರೆ ಮನಸ್ಸಿನ ಶಕ್ತಿ, ಅಂತ:ಸತ್ತ್ವ. ಇದನ್ನೇ ಕುವೆಂಪು ಅವರು ತಮ್ಮ ನೇಗಿಲಯೋಗಿ’  ಕವನದಲ್ಲಿ ರೈತನನ್ನು ಭುಕ್ತಿಪಥದಿಂದ `ಮುಕ್ತ’ನಾದವನು ಎಂದಿದ್ದು.
                            ನೇಗಿಲ ಹಿಡಿದಾ ಹೊಲದೊಳು ಹಾಡುತ
                            ಉಳುವಾ ಯೋಗಿಯ ನೋಡಲ್ಲಿ
                            ಫಲವನು ಬಯಸದೆ ಸೇವೆಯೆ ಪೂಜೆಯ
                            ಕರ್ಮವೇ ಇಹಪರ ಸಾಧನವು

ಅನ್ನ ನೀಡುವ ರೈತ ನಿಜಕ್ಕೂ ಯೋಗಿಯೇ. ತಾನು ಬೆಳೆಯುವ ಅನ್ನ ಯಾರ್ಯಾರ ಹೊಟ್ಟೆಗೆ ತಂಪನ್ನೀಯುವುದೋ ಎನ್ನುವ ಅರಿವಿಲ್ಲದೆ ನಿವರ್ಿಕಾರದಿಂದ ಬಿತ್ತಿ ಬೆಳೆದು ಅನ್ನ ನೀಡಿ ಮುಕ್ತನಾಗುತ್ತಾನೆ. `ಅರಿವಿಲ್ಲದಿರುವುದು’ ಎಷ್ಟು ಸುಖ ನೀಡುತ್ತದೆ ಎನ್ನುವುದಕ್ಕೆ ಈ ಉಳುವಾ ಯೋಗಿಯೇ ಸಾಕ್ಷಿ. ಅರಿವಿಲ್ಲದೆ ಬದುಕುವ ಸುಖ ಎಷ್ಟು ಜನರಿಗಿದೆ? ಅರಿವಿಲ್ಲದೆ ಬದುಕುವ ಹಕ್ಕಿಗಳು ಎಷ್ಟು ಮುಕ್ತವಲ್ಲವೇ? ಅಸೂಯೆ ಮೂಡುತ್ತದೆ ಬಾನಲ್ಲಿ ಹಾರಾಡುವ ಈ ಪಕ್ಷಿಸಂಕುಲದೆಡೆಗೆ. ತಮ್ಮ ಬಣ್ಣಬಣ್ಣದ, ವೈವಿಧ್ಯಮಯ ರೆಕ್ಕೆಪುಕ್ಕಗಳ ಮಹತ್ತ್ವವನ್ನು, ಆಕರ್ಷಣೆಯನ್ನೂ ಒಂಚೂರೂ ಅರಿಯದೆ ಜೀವಿಸುವ ಇವುಗಳ ಸುಖ ಮನುಷ್ಯನಿಗೆ ಎಲ್ಲಿದೆ?

ಮನುಷ್ಯನಿಗೆ ಯಾವೆಲ್ಲವುದರಿಂದ ಮುಕ್ತಿ ದೊರೆಯಬಹುದೆಂದು ಪುರಂದರದಾಸರು ಇಲ್ಲಿ ಹೇಳುತ್ತಾರೆ.
                            ಸುಮ್ಮನೆ ಬರುವುದೇ ಮುಕ್ತಿ
                            ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ
                            ಮನದಲ್ಲಿ ದೃಢವಿರಬೇಕು ಪಾಪಿ
                            ಜನರ ಸಂಸರ್ಗವ ನೀಗಲಿ ಬೇಕು
                            ಅನುಮಾನವನು ಬಿಡಬೇಕು ತನ್ನ
                            ತನುಮನಧನವನೊಪ್ಪಿಸಿ ಕೊಡಬೇಕು
ದಾಸರು ಕೊನೆಯಲ್ಲಿ ವ್ಯಾಪಾರವನು ಬಿಡಬೇಕು ಎಂದಿದ್ದಾರೆ. ಇದೇ ಅತ್ಯಂತ ಕಷ್ಟಕರ ಕೆಲಸ. ಈ ಭೂಮಿ ವ್ಯಾಪಾರಿಗಳ ಸ್ವರ್ಗ. ಇಲ್ಲಿ ಕೊಡುಕೊಳ್ಳುವಿಕೆಯಿಲ್ಲದೆ ಬದುಕು ನಿಂತಂತೆ. ಹಾಗಾದರೆ ಮುಕ್ತಿಯ ಕಥೆ? ಹರಿಯನ್ನು ಮನದಲ್ಲಿ ತುಂಬಿಕೊಂಡ ದಾಸರು ಮುಕ್ತಿಯೆಡೆಗೆ ಪಯಣವೆಂದರೆ ಹೊಟ್ಟೆಪಾಡಿನೊಂದಿಗೆ ಹರಿಯನ್ನು ನೆನೆಯುವುದು ಎನ್ನುತ್ತಾರೆ. ಅಷ್ಟು ಸರಳ, ಮುಕ್ತಿಯೆಂದರೆ ಹರಿಯ ದಾಸರಿಗೆ. ಹರಿದಾಸರಲ್ಲೇ ಏಕೈಕ ಕವಿಯಾದ ಕನಕದಾಸರು ಹರಿದಾಸ ಬದುಕಿನಿಂದಲೇ ಮುಕ್ತಿ ಕಂಡವರು.
                            ಈಶ ನಿನ್ನ ಚರಣಭಜನೆ ಆಸೆಯಿಂದ ಮಾಡುವೆನು
                            ದೋಶರಾಶಿ ನಾಶಮಾಡೊ ಶ್ರೀಶ ಕೇಶವ
                            ಮರೆಯದಲೆ ಹರಿಯ ನಾಮ ಬರೆದು ಓದಿ ಕೇಳಿದರ್ಗೆ
                            ಕರೆದು ಮುಕ್ತಿ ಕೊಡುವ ನೆಲೆಯಾದಿ ಕೇಶವ

ಹೀಗೆ ಒಬ್ಬ ಶ್ರೀಮಂತ ಚಿನಿವಾರ, ಮತ್ತೊಬ್ಬ ದಂಡನಾಯಕ ಹರಿನಾಮ ಸ್ಮರಣೆ ಮಾಡಿ ಭಕ್ತಿಮಾರ್ಗದಲ್ಲಿ ನಡೆದು ಆರಾಧನಾಮುಕ್ತಿಯನ್ನು ಹೊಂದಿದರು. `ದಾಸ’ ಅನ್ನುವ ಪದ ಗುಲಾಮಗಿರಿಯನ್ನು ಪೋಷಿಸುವ ಭಾವವಾಗಿ ಕಂಡುಬರೋದುಂಟು. ಅದು ಬರೀ ಅಕ್ಷರಗಳಿಂದ ಮೂಡುವ ಭಾವವಷ್ಟೇ. `ದಾಸ’ ಇಲ್ಲಿ `ನಾನು’ ಅನ್ನುವ ಅಹಂಕಾರವಿರದ ಮನದ ಭಾವ. ಕನಕದಾಸರ ಜನಪ್ರಿಯ `ನಾನು ಹೋದರೆ ಹೋದೇನು’ ಅನ್ನುವ ಮಾತು ಮುಕ್ತಿಯ ಪಥ.
               
ತನ್ನ ವೈಯಕ್ತಿಕ, ಸ್ವಂತದ್ದು ಎನ್ನಲಾಗುವುದನ್ನು ಇನ್ನೊಂದು ಮಹತ್ತರವಾದುದಕ್ಕೆ ಅಪರ್ಿಸುವುದು, ಕಳಕೊಳ್ಳುವುದು, ಅದರಲ್ಲಿ ಐಕ್ಯವಾಗುವುದು ಮುಕ್ತಿ. ಹಾಗಾದರೆ ಇದು ಸಮರ್ಪಣಾ ಪ್ರೇಮವಲ್ಲವೇ?     ಸಖಿಯರ ಸಖಿ ರಾಧೆ ತನ್ನ ಸಖ ಕೃಷ್ಣನಲ್ಲಿ, ರಜಪೂತ ರಾಜಕುವರಿ ಮೀರಾ ತನ್ನ ಗಿರಿಧರನಲ್ಲಿ, ಹನುಮ ರಾಮನಲ್ಲಿ ಐಕ್ಯಗೊಂಡದ್ದು ಪ್ರೇಮಮುಕ್ತಿಯಲ್ಲೇ. ಭಾರತೀಯ ದರ್ಶನಗಳಲ್ಲೊಂದಾದ ಅದ್ವೈತದಲ್ಲಿ ಈಶ್ವರನ ಜ್ಞಾನ ಅಥವಾ ಬ್ರಹ್ಮೈಕ್ಯವೇ ಮೋಕ್ಷ ಎಂದಿದೆ. ಅಂದರೆ ಕರ್ಮ, ಭಕ್ತಿಯಿಂದ ಉಂಟಾದ ಸ್ಪಷ್ಟಜ್ಞಾನದ ಸ್ಥಿತಿ. ದ್ವೈತದಲ್ಲಿ ತನ್ನನ್ನು ತಾನು ಪರತಂತ್ರನೆಂದು ಅರಿಯುವುದು ಮುಕ್ತಿಯ ಪಥ. ಕನಕದಾಸರು ಇದನ್ನೇ `ಈಶ ನಿನ್ನ ಚರಣ ಭಜನೆ’ ಕೀರ್ತನೆಯಲ್ಲಿ ಹೇಳಿದ್ದು. ಜಗನ್ನಾಥದಾಸರು `ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು’ ಎಂದು ಹಾಡಿ ಭಕ್ತಿಯು ಮುಕ್ತಿಯ ಸರಳ, ಸುಲಭ ದಾರಿ ಎನ್ನುತ್ತಾರೆ. ಕನಕದಾಸರ ಜನಪ್ರಿಯ ಕೀರ್ತನೆ `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಕೀರ್ತನೆಯಲ್ಲಿ `ಉನ್ನಂತ ನೆಲೆಯಾದಿ ಕೇಶವನ ಧ್ಯಾನವನ್ನು ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ’ ಎನ್ನುತ್ತಾ ಮಹದಾನಂದವೂ ಮುಕ್ತಿಯ ಪ್ರತಿಬಿಂಬವೆನ್ನುವಂತೆ ನೋಡಿದ್ದಾರೆ. ಆನಂದವೆನ್ನುವುದು ಸಂತೃಪ್ತಿಯ ಲಕ್ಷಣ. ಅಲ್ಲಿಗೆ ಸಂತೃಪ್ತಿಯೇ ಮುಕ್ತಿ ಎಂದಾಗಲಿಲ್ಲವೇ?

ಭರತಭೂಮಿ ನೋಡಿದ ಮತ್ತೆರಡು ಅದ್ಭುತ ದರ್ಶನಗಳಾದ ಜೈನ ಮತ್ತು ಬೌದ್ಧದಲ್ಲಿ ಮುಕ್ತಿಯೆಂದರೆ ಅರ್ಹತ್ ಪದವಿ ಮತ್ತು ನಿರ್ವಾಣ. ಜೈನರು ಜೀವ, ಪುದ್ಗಲ(ಪ್ರಾಪಂಚಿಕ ವಸ್ತುಗಳು) ಸಂಬಂಧಗಳಿಂದ ಬಿಡಿಸಿಕೊಂಡು ತನ್ನ ಮೂಲಸ್ಥಿತಿಯನ್ನು ಸಾರಿದಾಗ `ಅರ್ಹತ್’ ಪದವಿಯನ್ನು ಮುಟ್ಟುತ್ತದೆ. ಅದೇ ಮುಕ್ತಿ. ಇನ್ನು ಬೌದ್ಧರ ನಿವರ್ಾಣವೆಂದರೆ ನಾನು ಎಂಬ ಭಾವದ ನಿವಾರಣ. ದರ್ಶನಗಳ ಹೆಸರು ಬೇರೆಬೇರೆಯಷ್ಟೇ. ಹೇಳಿದ ಸಾರವೆಲ್ಲವೂ ಒಂದೇ. ಎಲ್ಲ ದರ್ಶನಗಳನ್ನು ಸಮೀಕರಿಸಿ ಸರಳವಾಗಿ ಓಶೋ ಹೇಳುತ್ತಾರೆ, `ಶರಣಾಗುವ ಕಲೆಯನ್ನು ಕಲಿಯಿರಿ, ಸಮಪರ್ಿತರಾಗುವ ಕಲೆಯನ್ನು ಕಲಿಯಿರಿ, ಇಲ್ಲವಾಗುವ ಕಲೆಯನ್ನು ಕಲಿಯಿರಿ’. ಎಷ್ಟು ಸರಳ ಸುಂದರ ಮಾತುಗಳು. ಈ ಇಲ್ಲವಾಗುವುದು ಸಮಪರ್ಿತವಾಗುವುದು ಮುಕ್ತಿಯೇ. ಎಷ್ಟೊಂದು ಹೆಸರುಗಳು ಮುಕ್ತಿಗೆ. ಅರ್ಥವಾಗಬೇಕಷ್ಟೇ.

ನಿಷ್ಕಾಮ ಭಕ್ತಿಯ ಅರಿವನ್ನು ಮೂಡಿಸಿದ ಮಹಂತ, ಅಲ್ಲಮಪ್ರಭು. ಅವನ ಎಲ್ಲ ವಚನಗಳು ಮುಕ್ತತೆಯ ಹೂರಣವನ್ನೇ ಬಡಿಸಿದ್ದು. ಆಳಕ್ಕೆ ಆಳ, ವಿಸ್ತಾರಕ್ಕೆ ವಿಸ್ತಾರ ಅಷ್ಟೇ ಎತ್ತರಕ್ಕೆ ಮಹತ್ತರವೆನಿಸುವ ಅನುಭಾವ ಅವನದು.
                            ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
                            ಬಯಲು ಬಯಲಾಗಿ ಬಯಲಾಯಿತ್ತಯ್ಯಾ
                            ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
                            ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಬಿತ್ತು, ಬೆಳೆ, ಪೂಜೆ, ಬಯಲು ಎಲ್ಲವೂ ಮುಕ್ತಿಪಥದ ಮೈಲುಗಲ್ಲುಗಳು. ಪೂಜೆಯೆನ್ನುವುದು ಬಿತ್ತುವ, ಬೆಳೆಯುವ ಎಲ್ಲವನ್ನೂ ಒಳಗೊಂಡ ಕಾಯಕದ ಅನುಸಂಧಾನ. ಸಂತರು, ಶರಣರು, ಹರಿದಾಸರು ಈ ಎಲ್ಲ ಮಹಾಮಹಿಮರು ಪೂಜಿಸಿಯೇ ಬಯಲಾದವರು. ಬಯಲು, ಮೋಕ್ಷ, ಅರ್ಹತ್, ನಿರ್ವಾಣ ಇವೆಲ್ಲವೂ ಮೂಡಬೇಕಾಗಿರುವುದು ಮನವೆಂಬ ಆಲಯದಲ್ಲಿ. ಮನಸ್ಸೇ ಇವೆಲ್ಲದ್ದಕ್ಕೆ ತಳಪಾಯ. ಬಯಲಿನ ಬಯಕೆ ಪಾಯದಲ್ಲಿ ಮೂಡದಿದ್ದರೆ ಮುಕ್ತಿಸೌಧ ಎದ್ದು ನಿಲ್ಲದು. ಹೀಗೆ ತಳಪಾಯದಲ್ಲಿ ಬಯಲಿನ ಹೆಬ್ಬಯಕೆ ಮೂಡಿ ಭಕ್ತಿಯನ್ನು ಬಿತ್ತಿದರೆ ಮುಕ್ತಿಯ ಬೆಳೆ ಕೊಯಿಲಿಗೆ ಸಿಗುತ್ತದೆ. ಕುವೆಂಪು ಅವರ `ಮಂತ್ರಾಕ್ಷತೆ’ ಕವನದಲ್ಲಿ ಈ ಮೂರುಸಾಲಿನ ಮಂತ್ರವಿದೆ. `ಶಕ್ತಿಯು ದೇಹದ ಕರ್ತವ್ಯ, ಭಕ್ತಿಯು ಹೃದಯದ ಕರ್ತವ್ಯ, ಮುಕ್ತಿಯು ಆತ್ಮದ ಕರ್ತವ್ಯ’. ಕರ್ತವ್ಯವೂ ಮುಕ್ತಿಯಾಯಿತು. ಆದ್ದರಿಂದ ಮುಕ್ತಿಗಾಗಿ ಪರಿತಪಿಸಬೇಕಿಲ್ಲ. ಅಲ್ಲಿ ಇಲ್ಲಿ ಓಡಾಡಬೇಕಿಲ್ಲ. ಇರುವಲ್ಲೇ ಮೋಕ್ಷ ಕಾಣುತ್ತೇನೆ ಎಂದವಳು ಸಂತ ಮೀರಾಬಾಯಿ. ` ನಾ ಜಾವೂ ಮಥುರಾ, ನಾ ಗೋಕುಲ ಜಾವೂ ನಾ ಜಾವೂ ಮೇ ಕಾಶಿ, ಮೋಹೆ ಭರೋಸೋ ಏಕ ತುಮ್ಹರೋ’ ಎಂದು ಹಾಡುತ್ತಾ ಗಿರಿಧರನಲ್ಲಿ ಲೀನವಾದವಳು. ಇದೇ ಅದ್ಭುತ ಭಾವ ತುಂಬಿದ ಸಾಲುಗಳು ಕುವೆಂಪು ಅವರ `ದೇವರ ಮನೆ’ ಕವನದಲ್ಲೂ ನೋಡಬಹುದು.
                            ಇಲ್ಲೆ ಗಂಗಾತೀರ; ಇಲ್ಲೆ ಹಿಮಗಿರಿ ಪಾರ
                            ಇಲ್ಲಯೆ ಕಣಾ ಆ ಹರಿದ್ವಾರ
                            ಇಲ್ಲೆ ವಾರಣಾಸಿ ಇಲ್ಲಿಯೇ ಹೃಷಿಕೇಶ
                            ಇಲ್ಲೇ ಇದೆ ಮುಕ್ತಿಗೆ ಮಹಾದ್ವಾರ
                            ಅಲ್ಲಿಗಿಲ್ಲಿಗೆ ಏಕೆ ಸುಮ್ಮನಲೆಯುವೆ ದೂರದೂರ
                            ಇಲ್ಲೆ ಓಂ ಪೂರ್ಣಮದೆ ಓ ಮನವೇ ಓ ಬಾರಬಾರ

ಮತ್ತೆ ಮನಸ್ಸಿಂದಲೇ ಮುಕ್ತಿ ಕಾಣುವ ಭಾವ. ಮುಕ್ತಿಗೆ ಎಷ್ಟೊಂದು ವ್ಯಾಖ್ಯಾನಗಳು.  ಬಯಲಾಗುವ ಶಕ್ತಿಗೆ ಅನುಗುಣವಾಗಿ ಕಾಣುವ ಮುಕ್ತಿಪಥಗಳು ಮುಕ್ತಿ, ಮೋಕ್ಷ ಅನ್ನುವುದರ ಹೊಸಹೊಸ ಭಾಷ್ಯಗಳನ್ನು ನೀಡುತ್ತವೆ. ವೈಚಾರಿಕ ನೆಲೆಯಿಂದ ಕಂಡ ಮುಕ್ತಿಪಥಗಳ ಪಯಣದಷ್ಟೇ ಮುಖ್ಯ, ಸರಳ, ಸಾಮಾನ್ಯ ಲೌಕಿಕ ಬದುಕಿನ ಮುಕ್ತಿಪಥಗಳ ಪಯಣ. ಏಕೆಂದರೆ ನಾವೆಲ್ಲರೂ ಈ ಪಥದ ಪಯಣಿಗರು. ಹೊಟ್ಟೆಪಾಡಿಗಾಗಿ ಭೂಮಿ ಹಸನು ಮಾಡಿ ಬೀಜ ಬಿತ್ತಿ, ಹೂ ಮೂಡಿದಾಗ ಬೆಳೆದ ರೈತನ ಮುಖದಲ್ಲಿ ಮೂಡುವ ಸಂತೃಪ್ತಿಯೇ ಮುಕ್ತಿ. ಬಣ್ಣಬಣ್ಣದ ಆಟಿಕೆಗಳನ್ನು ಮಾರುತ್ತಾ ಮಕ್ಕಳ ಮುಖದಲ್ಲಿ ನಗು ಮೂಡಿಸುವವನೇ ಮುಕ್ತ. ಚಿತ್ತಾರ ತುಂಬಿದ ರಂಗುರಂಗಿನ ಬಳೆಗಳ ಮಲ್ಹಾರವನ್ನು ಜತನದಿಂದ ಹೊತ್ತೊಯ್ದು ಕೈಗಳಿಗೆ ಸೌಂದರ್ಯ ತುಂಬುವವನು ಮುಕ್ತಿಗೆ ಹಕ್ಕುದಾರ. ಒಟ್ಟಿನಲ್ಲಿ ಕರ್ತವ್ಯ ನಿರ್ವಹಣೆಯೇ ಮುಕ್ತಿ. ನಿರ್ವಂಚನೆಯಿಂದ ಕಾಯಕ ಮಾಡುವವನೇ ಮುಕ್ತ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ತನಗೆ ಬದುಕು ನೀಡಿದ ಕೆಲಸದಲ್ಲಿ ಫಲಾಪೇಕ್ಷೆಯಿಲ್ಲದೆ ಸಂತೋಷದಿಂದ ತೊಡಗಿಸಿಕೊಳ್ಳವುದೇ ಮುಕ್ತಿ. ಹೆಚ್.ಎಸ್.ವೆಂಕೇಶಮೂರ್ತಿಯವರ ಈ ಕವನ ನಾಡಿನ ಜನರ ಮನಗೆದ್ದಿದ್ದು ಮುಕ್ತಿಯ ಸುಂದರ ಸರಳ ವ್ಯಾಖ್ಯಾನದಿಂದ.
                            ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
                            ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಈ ನೀಡುವುದು ಎಂದರೆ ಯೋಚಿಸದೆ ಮಾಡುವ ಕರ್ಮ. ಮನುಷ್ಯನಿಗೆ ಸಾಧ್ಯವೇ? ತಾನು, ತನ್ನದು ಎನ್ನುವ ಆತ್ಮರತಿಯಿಂದ ನರಳಾಡುವ ಮನುಷ್ಯನಿಗೆ ಕೊನೆಗೆ ಅಂತ್ಯಕಾಲದಲ್ಲಿ ಸಂತಾನದಿಂದ ಮುಕ್ತಿಯೆನ್ನುವ ಭ್ರಮೆಗೆ ಬಿದ್ದು ತೊಳಲಾಡುತ್ತಾನೆ. ಮುಕ್ತಿಯೆನ್ನುವುದು ಸರಳ, ಶುದ್ಧ ಮನಸ್ಸಿನ, ನಿರ್ವಿಕಾರದಿಂದ ಹೊಂದುವ ಭಾವ. ಅದು ಬೇರೆಯವರಿಂದ ಹೊಂದಲು ಸಾಧ್ಯವಿಲ್ಲ. ಮುಕ್ತಿ ಕೊಡುವುದು ನಮ್ಮದೇ ಮನಸ್ಸು, ನಮ್ಮದೇ ಯೋಚನೆಗಳು.
                            ಸತ್ಯಕ್ಕೊಬ್ಬ ಮಗ ಶಾಂತಕ್ಕೊಬ್ಬ ಮಗ
                            ದುರ್ವೃತ್ತಿ ನಿಗ್ರಹಕ್ಕೊಬ್ಬ ಸಮಚಿತ್ತನೊಬ್ಬನು
                            ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ
                            ಹೆತ್ತರೇನು? ಇನ್ನು ಹೆರದಿದ್ದರೇನಯ್ಯ?

ಜನಮನದ ಕತ್ತಲು ತೊಲಗಿಸಲು ಕನಕದಾಸರ ಪ್ರಯತ್ನವಿದು. `ನಾ ಪುತ್ರಸ್ಯ ಗತಿರ್ನಾಸ್ತಿ’ ಎಂದು ಅಖಂಡವಾಗಿ ನಂಬಿರುವ ಸಾಮಾನ್ಯ ಸಂಪ್ರದಾಯವನ್ನು ಪ್ರಶ್ನಿಸಿ, ಒಳ್ಳೆಯ ಆಚಾರ, ವಿಚಾರವಿಲ್ಲದವನಿಗೆ ಮಕ್ಕಳಿದ್ದರೂ(ಮಗನಿದ್ದರೂ) ಮುಕ್ತಿ ಇಲ್ಲವೆನ್ನುವ ಕನಕದಾಸರು ಮುಕ್ತಿ ಪಡೆಯಬೇಕೆಂದರೆ ಕೆಟ್ಟವಿಚಾರಗಳಿಂದ, ಅಹಂಕಾರದಿಂದ ಮುಕ್ತವಾಗಬೇಕು ಎನ್ನುತ್ತಾರೆ. ಅಷ್ಟೇ ಅಲ್ಲದೆ `ಇಷ್ಟು ದಿನ ಈ ವೈಕುಂಠ ಎಷ್ಟು ದೂರವೆನ್ನುತ್ತದ್ದೆ’ ಕೀರ್ತನೆಯಲ್ಲಿ ಪರಮಪದವನ್ನು  ಭೂಮಿ ಮೇಲೆ ಅನುಭವಿಸಲು ಸಾಧ್ಯ ಎನ್ನುತ್ತಾರೆ. ಪ್ರಕೃತಿ ಮಾತೆಯ ಮಡಿಲು ಅದ್ಭುತಗಳ, ಕೌತುಕಗಳು ನೆಲೆ. ಅದನ್ನು ಗುರುತಿಸಿ ಮನದಿಂದ, ಒಳಗಣ್ಣಿಂದ ನೋಡುವ ಪ್ರಯತ್ನ ಮಾಡಿ ಇಲ್ಲೆ ಪರಂಧಾಮ ಪಡೆಯಬಹುದು ಎನ್ನುತ್ತಾ ಮುಕ್ತವಾಗುತ್ತಾರೆ. ನಿಜ, ಹೂಗಳಿವೆ, ಮುಳ್ಳುಗಳೂ ಇವೆ. ಮುಳ್ಳುಗಳಿಂದ ಹೂಗಳನ್ನು ಬೇರ್ಪಡಿಸಿ ಆರಿಸಿ ಸಂತೃಪ್ತಿಯ ಭಾವದಲ್ಲಿ ಮೀಯುವುದೇ ಮುಕ್ತಿ.
                           
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ….

(‘ವಿಜಯವಾಣಿ’ ಪ್ರಕಟಿತ)

2 Comments (+add yours?)

  1. Mamatha Deva
    Sep 18, 2013 @ 14:39:58

    Chennagi barediddiri Deepa .

    Reply

Leave a comment